ಬೆಂಗಳೂರು:ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಹಣಕಾಸು ಇಲಾಖೆಯ ಅನುಮೋದನೆ ಸಿಕ್ಕಿದ ತಕ್ಷಣ ಭರ್ತಿ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ, ರಾಜ್ಯದ ಸರ್ಕಾರಿ ಪದವಿ ಕಾಲೇಜು ಬೋಧಕ, ಬೋಧಕೇತರ ಹುದ್ದೆ ಖಾಲಿ ಇವೆ. ಬಹಳ ವರ್ಷಗಳಿಂದ ಹುದ್ದೆಗಳು ಖಾಲಿಯಿವೆ. ವಿದ್ಯಾರ್ಥಿಗಳ ಭವಿಷ್ಯ ಕುಂಠಿತಗೊಂಡಿದೆ. ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಈ ಬಗ್ಗೆ ಸರ್ಕಾರದ ಆದೇಶವೂ ಆಗಿತ್ತು, ನೇಮಕಾತಿ ಭರ್ತಿಯೂ ನಡೆದು ಸ್ಥಗಿತವಾಗಿದೆ. ಉಪನ್ಯಾಸಕರ ಹುದ್ದೆ ಭರ್ತಿ ಮಾಡದೆ ಹೋದರೆ ಶಿಕ್ಷಣ ವ್ಯವಸ್ಥೆ ಹದಗೆಡಲಿದೆ ಎಂದು ಹೇಳಿದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಉತ್ತರಿಸಿ, ಶಿಕ್ಷಣಕ್ಕೆ ಆದ್ಯತೆ ಕೊಟ್ಟ ಸಮಾಜ ಮಾತ್ರ ಉನ್ನತವಾಗಿರುತ್ತದೆ. ಬೋಧಕ ಹುದ್ದೆ ಬಹಳ ವರ್ಷಗಳಿಂದ ಖಾಲಿಯಿವೆ. ಬೋಧಕ ಹುದ್ದೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡಲಾಗುವುದು. ಆರ್ಥಿಕ ಇಲಾಖೆಯಿಂದ ಅನುಮತಿ ಸಿಗಬೇಕು. ನಂತರ ನಾವು ಭರ್ತಿ ಮಾಡಲಾಗುವುದು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖಂಡ್ರೆ, ನಿರ್ದಿಷ್ಟ ಸಮಯದೊಳಗೆ ಹುದ್ದೆ ಭರ್ತಿ ಮಾಡಿ ಎಂದು ಒತ್ತಾಯಿಸಿದರು. ಅವರಿಗೆ ಇತರ ಕೆಲವು ಸದಸ್ಯರು ಕೂಡ ಧ್ವನಿಗೂಡಿಸಿದರು.
ಶಿಕ್ಷಣ ಸಚಿವರ ಉತ್ತರಕ್ಕೆ ಕೈ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದ ಪಿಟಿ ಪರಮೇಶ್ವರ್ ನಾಯಕ್, ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಬಹುತೇಕ ಎಲ್ಲಾ ಕೆಲಸಗಳು ಬಾಕಿ ಉಳಿದಿವೆ. ಶಿಕ್ಷಣ ಇಲಾಖೆಯಲ್ಲೂ ಬಹುತೇಕ ಹುದ್ದೆ ಭರ್ತಿ ಮಾಡಿಲ್ಲ, ನಮ್ಮ ಭಾಗದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಸುರೇಶ್ ಕುಮಾರ್ ಮಧ್ಯಪ್ರವೇಶಿಸಿ, ಸದನದ ಭಾವನೆ ಅರ್ಥವಾಗಿದೆ. ಶಿಕ್ಷಕರ ಕೊರತೆಯಿಂದ ಶಿಕ್ಷಣದ ಕೊರತೆಯಾಗಬಾರದು. ತಾವೇ ಸ್ವತಃ ಉನ್ನತ ಶಿಕ್ಷಣ ಸಚಿವರೊಂದಿಗೆ ಹಾಗೂ ಮುಖ್ಯಮಂತ್ರಿ ಜೊತೆ ಮಾತನಾಡಿ ಆದಷ್ಟು ಬೇಗ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
EmoticonEmoticon